ಗುರುವಾರ, ಮಾರ್ಚ್ 23, 2023

ಆಧನಿಕ ರೈತ

ಆಧನಿಕ ರೈತ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಅನ್ನವ ನೀಡುವ ಅನ್ನದಾತ
ಕನ್ನವ ಹಾಕುವ ಕನ್ನದಾತ

ಉಳುವಾ ರೈತನ ನೋಡಲ್ಲಿ
ರೈತನ ನೇಗಿಲು ನೇತಲ್ಲಿ
ಟ್ರ್ಯಾಕ್ಟರ್ ಹರಿಸಿದ ಹೊಲದಲ್ಲಿ
ಆಧುನಿಕತೆಯ ದಿನದಲ್ಲಿ

ಎತ್ತು, ಏತ ನೆನಪಿನಲಿ
ನೀರು ಹರಿಯಲು ಪಂಪಿನಲಿ
ಬೀಜವ ಬಿತ್ತುವ ಕೈಯೆಲ್ಲಿ
ಬೆವರನು ಸುರಿಸುವ ಮೈಯೆಲ್ಲಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಗೊಬ್ಬರ ಹರಡಿತು ಯಂತ್ರವದು
ಅಗೋ ಔಷದಿ ಚಿಮ್ಮಿತು ತಂತ್ರವದು
ಹನಿ ನೀರಾವರಿ ಇಂದಿನ ನೀತಿ
ನೀರನು ಉಳಿಸುವ ನೂತನ ರೀತಿ

ಕಟಾವು ಮಾಡಲು ಜನ ಬೇಕಿಲ್ಲ
ಫಸಲು ಬರದಿರೆ ವಿಮೆ ಇದೆಯಲ್ಲ
ಪತ್ನಿಯು ತರುವಳು ಅನ್ನದ ಬುತ್ತಿ
ಬುಟ್ಟಿಯ ಹೊತ್ತಿ ಸಿಂಬಿಯ ಸುತ್ತಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಭೂಮಿಯಿಲ್ಲದ ರೈತರು ಉಂಟು
ಇವರಿಗೂ ಬೇಕು ಪುಕ್ಕಟೆ ಕರೆಂಟು
ಸಾಲ ಕಟ್ಟದೇ ಬ್ಯಾಂಕಿಗೆ ಖೋತ
ಸಾಲ ಮನ್ನಾ ಇವರ ನಿತ್ಯದ ಗಾಥ

ಅನ್ನವಿಲ್ಲದೆ ಸತ್ತ ಅನ್ನದಾತ
ಚಿನ್ನವನೇ ಬಿತ್ತ ಕನ್ನದಾತ
ಕಾಯವ ತೊರೆದ ಕಾಯಕಯೋಗಿ
ಮಣ್ಣನೆ ಕದಿಯೇ ನಾಯಕಭೋಗಿ

ಮಣ್ಣಿನ ಮಕ್ಕಳು ಇವರಂತೆ
ನುಣ್ಣನೆ ಬೋಳಿಸೋ ಕುಳವಂತೆ
ಬಿದ್ದರೂ ಮೀಸೆ ಮಣ್ಣಾಗದಂತೆ
ನುಣುಚಿಕೊಳ್ಳುವ ಗುಣವಂತೆ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ರೈತಗೆ ತೋರಿಸಿ ಧರಣಿಯ ಹಾದಿ
ಕೆಲವರು ಪಡೆದರು ಸೌಧದ ಗಾದಿ.

ರಚನೆ : ಡಾ. ಪ್ರಭಾಕರ ಬೆಲವಾಡಿ



ಬುಧವಾರ, ಮಾರ್ಚ್ 22, 2023

ಯುಗಾದಿ

ಯುಗಾದಿ ಬಂತು

ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ

ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ತೋರಣ ಕಟ್ಟೋಣ ತಾರವ್ವ ಬೇವು
ಚಿತ್ರಾನ್ನ ತಿನ್ನೋಣ ತುರಿಯೇ ಮಾವು

ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು

ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.

ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.

ರಚನೆ : ಡಾ. ಪ್ರಭಾಕರ ಬೆಲವಾಡಿ 

ಮಂಗಳವಾರ, ಮಾರ್ಚ್ 7, 2023

ಮುದುಕಿ , ನಾ ಕಂಡ ಮಹಿಳೆ


                            this photo courtesy PINTEREST 



 ಎಲ್ಲಿ ಹೋದೆ ಮುದುಕಿ

ನಿತ್ಯ ನೇಮದಿ ಬರುವಾಕಿ


ಬಾಯಾಗೆ ಎಲಿ ಅಡಿಕಿ
ಮೆಲ್ಲ ಮೆಲ್ಲನೆ ಮೆದುಕಿ
ಪಿಚ್ ಅಂತ ಉಗಳಾಕಿ
ಚೀಲ ಸೊಂಟಕ ನೂಕಿ

ಬುಟ್ಟಿಯಲಿ ಬೆರಣೀಯ ಹಾಕಿ
ತಲಿ ಮ್ಯಾಲ ಸಿಂಬಿಯನು ನೂಕಿ
ಊರೆಲ್ಲಾ ಮಾರುತಾ ತಿರುಗಾಕಿ
ಗೋಡೆಯ ಮೇಲೆ ಗೆರೆ ಬರದಾಕಿ

ಊರ ಸುದ್ದಿಯನೆಲ್ಲಾ ಹೇಳಾಕಿ
ಎಲಿ ಅಡಕಿ ಕೊಟ್ಟವರ ಹೊಗಳಾಕಿ
ಕೊಡದವರ ಉಗುಳುಗುಳಿ ತೆಗಳಾಕಿ
ಬುಟ್ಟಿ ಹಿಡಿದೆತ್ತವ್ವ ಮೇಲೆ ಅನ್ನಾಕಿ

ಎಲ್ಲಿ ಹೋದಿಯಬೇ ಮುದುಕಿ
ಮನಿ ಮುಂದೆ ಬಂದು ನಿಲ್ಲಾಕಿ
ಬೋಣಿ ನಿಮದೇರೀ ಅನ್ನಾಕಿ
ಬ್ಯಾಡೆಂದ್ರು ಒಟ್ಟಿ ಹೋಗ್ಯಾಕಿ.

ರಚನೆ ಡಾ. ಪ್ರಭಾಕರ ಬೆಲವಾಡಿ

ಭಾನುವಾರ, ನವೆಂಬರ್ 27, 2022

ನೊಂದ ಹಸುಳೆಯ ಅಳಲು

 ನೊಂದ ಹಸುಳೆಯ ಅಳಲು

  image courtesy pinterest

ಪಲ್ಲವಿ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಚರಣಂ 1

ಪಾಂಡಿತ್ಯ ನಿಪುಣ ನೀ ಶಿಕ್ಷಕ, ಮೈಮನಮುಟ್ಟುವ ಪಾಠದ ಶಿಕ್ಷಕ

ಬಲು ಸಂಭ್ರಮದಿ ಬಂದಿಹೆ ಶಿಕ್ಷಕ, ವಿಧ್ಯೆ ಪ್ರಧಾಯಿಸೆನಗೆ ಓ ಶಿಕ್ಷಕ

ಚರಣಂ 2

ಜೀವಶಾಸ್ತ್ರವ ಕಲಿಸುವೆನೆಂದೆ, ಅದ ಬಣ್ಣಿಸಲು ಬತ್ತಲೆಯಾಗೆಂದೆ

ಮುಟ್ಟಲು ನೀ ನನ್ನಂಗಾಗಗಳ ಒಂದೊಂದೆ, ಪುಳಕಿತಳಾಗಿ ನಾನಿಂದೆ

ಚರಣ 3

ಇದು ಪಾಠದ ನೆಪದ ಆಟವೋ, ನಿನ್ನ ದಾಹಕೆ ಸಹಪಾಟವೋ

ನನ್ನಂಗದಿ ಆಡಿದ ಚೆಲ್ಲಾಟವೋ, ನರಿಯೊಬ್ಬನ ನನ್ನೊಡನಾಟವೋ

ಚರಣ 4

ಅಭಯ ಹಸ್ತದ ರಕ್ಷೆಯನಿಟ್ಟೆ, ಅಳಿಸಲಾಗದ ಶಿಕ್ಷೆಯ ಕೊಟ್ಟೆ

ಶಿಕ್ಷಕ ನೀನೆಂದು ನಂಬಿದೆ, ಘೋರ ಭಕ್ಷಕನಾಗಿ ನೀನಿಂದು ನಿಂದೆ

ಮಂಗಳ

ಗುರವೇ ದೇವ, ಗುರವೇ ವೈಭವ, ಗುರುಗಳೇ ಜಗದ ಜೀವ,

ಶಿಕ್ಷಕರೇ ನೀವ್ ಭಕ್ಷಕರಾಗದೆ, ನಂಬಿದ ಹಸುಳೆಗೆ ನೀಡುವ ಅಭವ.

 

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಸಂ: 94 48 48 89 10  



ಬುಧವಾರ, ಜನವರಿ 26, 2022

ಮುರಳಿ ನಾದ ಸುರಳಿ (ಅಷ್ಟಪದಿ) (ಆದ್ಯಂತ ಪ್ರಾಸ ಸಮಮಾತ್ರೆ)

 


Photo courtesy Pinterest


ಮುರಳಿ ನಾದ ಸುರಳಿ (ಅಷ್ಟಪದಿ) (ಆದ್ಯಂತ ಪ್ರಾಸ ಸಮಮಾತ್ರೆ)

 

ಅರಳಿ ಮರವನೇರಿ, ಕುಳಿತ ನೋಡು ನಮ್ಮ ಮುರಳಿ

ಮುರಳಿ ತನ್ನ ಲಹರಿಯಲ್ಲಿ, ನುಡಿಸುತಿದ್ದ ಮುರಳಿ

ಅರಳಿ ಮರದ ಎಲೆಗಳೆಲ್ಲ, ಕುಣಿಯುತಿತ್ತು ಅರಳಿ

ಮುರಳಿ ನಾದ ತೇಲುತಿರಲು, ರಾಧೆ ಮನವು ಅರಳಿ

ಮುರಳಿನಾದ ಸೆಳೆಯುತಿರಲು, ರಾಧೆ ಪಾದ ತೆರಳಿ

ಮುರಳಿ ನುಡಿಸುತಿದ್ದ ಮುರಳಿ, ರಾಧೆಯತ್ತ ಹೊರಳಿ

ಅರಳಿ ಮುರಳಿ ಕೊಟ್ಟ, ಪ್ರೀತಿಯೆಂಬ ನಾದಸುರಳಿ

ಮರಳಿ ಮುದದಿ ನೆನೆದಿರುವಳು, ಮನದಿ ರಾಧೆ ಅರಳಿ.


ರಚನೆ: ಡಾ.ಪ್ರಭಾಕರ್ ಬೆಲವಾಡಿ 

ಮಂಗಳವಾರ, ಜನವರಿ 25, 2022

ಕಳಿಸೋ ನನ್ ತವರೀಗೆ


 

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

(ಜಾನಪದ ಗೀತೆ ರಚಿಸುವ ಪ್ರಥಮ ಪ್ರಯತ್ನ)

 

ಸತಿ:

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

 

ಪತಿ:

ಸಪ್ಪಿರದ ತವರೂರ ನಾನಿಂದು ಬಲ್ಲೇ  

ಅಪ್ಪಿಲ್ಲ, ಅವ್ವಿಲ್ಲ ಅಳಬೇಡ ನಲ್ಲೇ          

ಅಪ್ಪಿಕೊಳ್ಳೋರು ಅಲ್ಲಾರಿಹರೆ ಹೇ ನಲ್ಲೇ

ತಪ್ಪಿ ಕೂಡ ನಿನ್ ತವರ ನೆನಿಬೇಡ ನಲ್ಲೇ

ತೋರಿಸು ಅಲ್ಲೀಗ ನಿನ್ನೋರು ಇಹರಾರೇ?

 

ಸತಿ:

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

ಅಲ್ಲಿಹ ಸೊಬಗ ಬಣ್ಣಿಸಲಿ ನಿನಗೆ ಹೇಗೆ?
           

ಹೊಳೆಯ ಉದ್ದಗಲಕ್ಕೂ ತೆಂಗಿನಾ ತೋಟ               

ಅದರ ಹಿಂದಿಹುದು ಗಿರಿಯಂಚಿನಾ ನೋಟ

ನಟ್ಟ ನಡು ನಾ ಹಾಡೋಡಿ ಬರೋ ದ್ವಾರ

ನಾ ಹೀರುತ ಬರುವ ಅಪ್ಪನ ಯೆಳನೀರ

ಕರೆದಿಹುದೆನ್ನಾ ತವರೂರು, ಆ ನನ್ನ ನೆನೆಸಿನೂರು.

 
ಪತಿ:

ಮುದ್ದ ಮಾಡೋರು, ಬಿದ್ದರೆತ್ತೋರಿಲ್ಲಾ,

ಮುದ್ದೆ ಮಾಡಿ ನಿನಗಲ್ಲಿ ಹಾಕೋರಿಲ್ಲಾ   

ಎತ್ತಿ ತೂರೋರಿಲ್ಲ, ಅದು ನಿನ್ನ ತವರೂರಾ?

 

ಸತಿ:

ಹಚ್ಚ ಹಸಿರ ತೆನೆ, ಬಾಗಿರುವ ಬಾಳೆ ಗೊನೆ,

ಮೆಚ್ಚೆದ್ದು ಸುರಿವ ಹನಿಹನಿಯ ಮಳೆ ಸೋನೆ

ಜುಳು ಜುಳು ಹರಿವುದು ಹೊಳೆ ನಗುತಲಿ ತಾನೆ

ಬುಳುಬುಳನೆ  ನೆಗೆಯುವುದು ಮೀನು ತಂತಾನೆ

ಅಂತಹುದು ಕೇಳಯ್ಯ ನನ್ನ ತವರೂರು.


ಅಗಸಿಯ ದ್ವಾರ, ಗುಡಿ ಗೋಪುರ ನಿಂತಾವ

ತೆಂಗ ಗರಿ ತೂಗಿ, ತಲೆ ಬಾಗಿ ಕರಿತಾವ

ಗೋವುಗಳು ನಲಿದು ನೊರೆ ಹಾಲ ಕರೆದಾವ

ಅಂತಹುದು ನೋಡಯ್ಯ ನನ್ನ ತವರೂರು.


ಮಾವಿನ ಗಿಡದ ಕೊಂಬ್ಯಾಗ ಹಗ್ಗವ ಕಟ್ಟಿ

ನನಗೆಂದು ಕೂರೆ ಅದಕ ಕೋಲನೊಟ್ಟಿ,

ಮ್ಯಾಲಿಂದ ಕೆಳಗ ನನ್ನ ತೇಲಾಡ ಬಿಟ್ಟಿ

ಗೆಳತಿಯರೋ ಕುಣಿದಾರು ಚಪ್ಪಾಳೆ ತಟ್ಟಿ

ಅಂತಹುದು ಕೇಳಯ್ಯ ನನ್ನ ತವರೂರು.


ಕೆಸರಾಗ ಜಾರಿ, ಕೆರಿಯಾಗ ತಾ ಹಾರಿ

ಮೇಲಕ್ಕ ಚಡ್ಡಿಯ, ರೊಯ್ಯಂತ ತಾ ತೂರಿ

ನಗತಾನ ಪೋರ, ತನ್ನ ಹಲ್ಲನ್ನು ಬೀರಿ                                                 

ನಗತಾಳ ಪೋರಿ, ಕೆರಿ ದಂಡೆಯನು ಏರಿ

ಕಳಿಸಯ್ಯ ನನ್ನಿನಿಯ ಅಂತ ತವರೀಗೆ.


ದುಂಡು ಮಲ್ಲಿಗೆ ಮಾಲೆಗೆ ಏತಕೆ ಕಾಸು

ಅಕ್ಕ ಪಕ್ಕದವರ ಅಕ್ಕರೆಯೇ ಸೊಗಸು

ಗುಬ್ಬಿಗಳ ಚಿಲಿಪಿಲಿ ಇಲ್ಲ್ಹೆಂಗೆ ಬರತಾವ

ಅಲ್ಲಿ ಅಂಗಳದಾಗ ಆಡುತ ಇರ್ತಾವ

ಕಳಿಸಯ್ಯ ನನ್ನಿನಿಯ ಅಂತ ತವರೀಗೆ.
   

ಉಂಡು ಬರುವೆನೊಮ್ಮೆ ತವರೂರ ಶೃಂಗಾರ

ಕಂಡು ಬರುವೆನು ಒಮ್ಮೆ ನನ್ನ ತವರೂರ

ಪ್ರತಿನಿತ್ಯ ಬೀಳುತಿದೆ ತವರಿನ ಕನಸು

ಭಾಗ್ಯದ ಓ ಸರದಾರ ತಡವೇಕೆ ಕಳಿಸು

ಯಾರಿರಲಿ, ಇರದಿರಲಿ, ಅದೇ ತವರೂರ 

 

ಪತಿ:

ಇದ್ದರಿರಲೇಕೆ ನಲ್ಲೆ ಅದು ಬಲು ದೂರ

ಇದ್ದರಿರಲೇಕೆ ನನಗಿಲ್ಲಿ ಬೇಸಾರ

ನೋಡಿ ಬಾ ನಲ್ಲೆ ಅಂತಿರುವ ತವರೂರ

ನೋಡಿ ಬಾ ನಲ್ಲೆ ನೀ ನಿನ್ನ ಕನಸೂರ.

 

ಸತಿ:                                                    

ತಂಗಳುಣ್ಣದಿರು, ನೀ ಮದಿರೆ ಮುಟ್ಟದಿರು

ಎಂಜಲಿಗೆ ನೀನೆಂದೂ ಕೈ ಹಾಕದಿರು

ಚಂಚಲತೆಯ ಓ ನನ್ನೊಲುಮೆ ಬಂಗಾರ 

ನೋಡೋಡಿ ಬರುವೆ ನಾ ನನ್ನ ತವರೂರ

 

ದಿನನಿತ್ಯ ಬರುವಳು ನೋಡಯ್ಯ ಕೆಲಸದಾಕೆ

ಜಾರೀತು ನಿನ ಪಂಚೆ ಇನಿಯ ಬಲು ಜೋಕೆ

ಅತ್ತ ಏರುತಿರೆ ಈ ತವರೂರ ಬಯಕೆ

ಇತ್ತ ಕಾಡುತಿದೆ ನನ್ನ ನಲ್ಲನಾರೈಕೆ

 

ತವರೂರ ಮುಟ್ಟಿ, ರಂಗೋಲಿಯ ಇಟ್ಟಾಕೆ

ಹೀಂಗ ಹೋಗಿ ಹಾಂಗ ಓಡೋಡಿ ಬರುವಾಕೆ.

 

ಹೋಗಿ ಬರುವೇ ನಾನೀಗ ನನ್ ತವರೀಗೆ

ಹೋಗಿ ಬರುವೇ ನಾನೀಗ ನನ್ ತವರೀಗೆ.

 

 

ಕರ್ತೃ: ಡಾ. ಪ್ರಭಾಕರ್ ಬೆಲವಾಡಿ

(ಭಾಗ್ಯದ ಬಳೆಗಾರ ಜಾನಪದ ಗೀತೆಯ ಕರ್ತೃವಿಗೆ ನಮಿಸುತ್ತಾ)

Thanks to Pinterest for the picture.

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...