ಮಂಗಳವಾರ, ಜುಲೈ 9, 2024

ಅಮ್ಮನ ಒಲವು

 ಅಮ್ಮನೊಲವು

 


 image courtesy Pinterest 


ಮರದ ಮೇಲೊಂದು ಕುಳಿತಿತ್ತು ಹಕ್ಕಿ

ರೆಕ್ಕೆ ಬಡಿಯುತ್ತಿತ್ತು ಖುಷಿಯಿಂದ ಉಕ್ಕಿ  

ಅದಕೊಂದು ಮಾಗಿದ ಮಾವಿನ ಹಣ್ಣು ಸಿಕ್ಕಿ

ತಿನ್ನ ಬಯಸಿತ್ತು ತನ್ನ ಕೊಕ್ಕಿನಿಂದ ಹೆಕ್ಕಿ ಕುಕ್ಕಿ.

 

ನೆನೆದು ಬಳಗವ ಕೂಗಲದು ‘ಚಿಕ್ ಚಿಕ್ ಚಿಕುವು’

ಬಂದವಗೋ ಮರಿಗಳು ಹಾಡುತ ‘ಚಿವ್ ಚಿವ್ ಚಿವು’

ನೀಗಿಸಿಲು ಆ ಮಾವು ತಮ್ಮಯ ಉದರದ ಹಸಿವು

ಕುಣಿದವಗೋ ಮರಿಬಳಗ ಮೆಚ್ಚಿ ಅಮ್ಮನಾ ಒಲವು.

 

ಅಮ್ಮನೇ ಗೆಲುವು, ಅಮ್ಮನಿರೆ ಬಲು ಚೆಲುವು

ಅಮ್ಮನಿರಲು ಎಮಗೆ ಅನುದಿನವೂ ಬಲವು

ಅಮ್ಮನಪ್ಪಿದರೆ ಹಾರಿ ಹೋಗದಿರದೇ ನೋವು

ಅಮ್ಮನಿರೆ ಗರಿಗೆದರಿ ದೂರ ಹಾರ ಬಲ್ಲೆವು ನಾವು.

 

ರಚನೆ: ಡಾ. ಬೆಳವಾಡಿ ಪ್ರಭಾಕರ್

prabhakarbelavadi@gmail.com

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಭಾನುವಾರ, ಜೂನ್ 30, 2024

ಶೃಂಗೇರಿಯ ನವರಾತ್ರಿ ಉತ್ಸವ


 


ಶೃಂಗೇರಿಯ ನವರಾತ್ರಿ ಉತ್ಸವ

 

ಶೃಂಗಗಿರಿಯ ಸಿರಿ ಬನಗಳಲಿ, ತುಂಗೆಯ ತಿಳಿ ಸೆರಗಿನಲಿ
ನವರಾತ್ರಿಯ ನವ ವೈಭವದ ಉತ್ಸಾಹದ ದಿನಗಳಲಿ
ನವದುರ್ಗೆಯರ ಭವ್ಯ ರೂಪದರ್ಶನ, ನಿತ್ಯ ನವ ನೂತನ.

 

ಮಧು ಕೈತಭ, ಶುಂಭ-ನಿಶುಂಭ, ಮಹಿಷಾಸುರರ    

ಮರ್ಧಿನಿಯ ಹಿರಿಮೆಯ, ಛಲಬಿಡದ ಮಹಿಮೆಯ

ಕಹಳೆಯೋ, ಇದು ರಣ ಕೇಕೆಯ ಮೊಳೆತವೋ...

ರಕ್ಕಸರುಗಳ ದಾಳಿಯ, ಮಹಿಷರೂಪದ ಗೂಳಿಯ

ಸೊಕ್ಕನಡಗಿಸಿಹ ದೇವಿಯ, ಠಕ್ಕರಳಿಸಿದ ಮಾತೆಯ

ಡಿಂ ಡಿಮವೋ, ಇದು ರಣಚಂಡಿಯರ ಡಿಂ ಡಿಮವೋ.     

ಜಗತ್ಪ್ರಸೂತಿಕೆ ಜಗನ್ಮಾತೆಯ, ಹಂಸವಾಹನೆ ಬ್ರಾಹ್ಮಿಯ,

ವೃಶಭವಾಹನೆ ಮಾಹೇಶ್ವರಿಯ, ಸೊಬಗಿನ ಐಸಿರಿಯೋ.

 

ಮಯೂರವಾಹನೆ ಕೌಮಾರಿಯ, ಗರುಡವಾಹನೆ ವೈಷ್ಣವಿಯ ,

ಕಂಗೊಳಿಪ ಕಣ್ಸೆಳೆವ ಸೋಜಿಗದ ರೋಚಕ ನೋಟವೋ. 

 

ಇಂದ್ರಾಣಿಯ, ಮೋಹಿನಿಯ, ಚೈತನ್ಯದ ಸಿಂಹವೇರಿಪ ಚಾಮುಂಡಿಯ,

ಕಣ್ ಕಿಡಿಯ ಸುರಸುಂದರ ತ್ರಿಪುರ ಸುಂದರಿಯ ಚಿತ್ತಾರವೋ 

 

ಗಜಲಕ್ಷ್ಮಿ, ರಾಜರಾಜೇಶ್ವರಿ ರಾರಾಜಿಸುವ ವಿಜಯದಶಮಿಯ  

ವಿಜೃಂಭಣೆಯ ಮನಮೋಹಕ ದೃಷ್ಯದಾಲಿಂಗನವೋ

 

ನಿತ್ಯ ಹರಿದ್ರಾಕುಂಕುಮದಲಿ, ನಿತ್ಯ ತೇಯ್ದಗಂಧದ ಘಮದಲಿ    

ಅಭಿಷೇಕದ ವೈಭವ, ನಿತ್ಯೋತ್ಸವ ದೇವಿ ನಿನಗೆ ನಿತ್ಯೋತ್ಸವ.

 

ಕಾಣರಿಯದ ವೈಭವದಲಿ, ವೀಣಾ ವಾದನದ ತರಂಗಗಳಲಿ

ಸಾಲಂಕೃತ ಮಂಟಪದಲಿ,  ಮುತ್ತು,ರತ್ನಭರಿತ ಸಿಂಹಾಸನದಲಿ,

ಪುಷ್ಪೋತ್ಸವ ತಾಯೆ ನಿನಗೆ ಪುಷ್ಪೋತ್ಸವ, ನಿತ್ಯೋತ್ಸವ.                                  

                                                         

ಶೃತಿ, ಸ್ಮೃತಿ, ಪುರಾಣ ಸಂಪುಟಗಳಲಿ, ಚತುರ್ವೇದ ಪಂಡಿತರ ಕಂಠ ತೇಲಿ

ಮಂತ್ರೋತ್ಸವ ತಾಯೆ ಮಂತ್ರೋತ್ಸವ, ನಿನ್ನ ಸ್ತುತಿಸುವ ಮಂತ್ರೋತ್ಸವ.

ಶೃಂಗೇರಿಯ ಭವ್ಯ ಪಥಗಳಲಿ, ತುಂಗೆ ನದಿಯ ಶಾಂತತೆಯ ತಟಗಳಲಿ
ಗುಡಿಗೋಪುರಗಳ ಉತ್ತುಂಗದಲಿ, ದೀಪೋತ್ಸವ ತಾಯೆ ದೀಪೋತ್ಸವ.

ಸ್ವರ ಲಹರಿಯ ಗಾಯನೋತ್ಸವ, ತಾಯೆ ನಿನಗೆ ನಿತ್ಯೋತ್ಸವ

ದೀಪೋತ್ಸವ ದೇವಿ ಧ್ಯಾನೋತ್ಸವ, ತಾಯೆ ಅನ್ನದಾನೋತ್ಸವ.

 

ತೆನೆ ಕಟ್ಟಿ, ಕಂದನೆಟ್ಟ, ಚಿನ್ನದಂಬಾರಿಯಲಿ, ನಿನ್ನ ಅಮೋಘ ದರ್ಶನ

ಮಂಗಳ ವಾದ್ಯ ಹಿಮ್ಮೇಳದಲಿ, ಕೀಲ ನರ್ತನ, ಡೋಲು ಸಹಿತ ಕೀರ್ತನ.

 

ನೆರೆದ ಭಕ್ತರ ಮನಸೆಳೆವ ಆ ದಿವ್ಯ ರಥದಲಿ, ತೆಂಗ ಒಡೆದ, ಬಾಳೆ ಎಸೆದ,

ಆರತಿಯನೆತ್ತ ಲೀಲೆಯಲಿ, ನಿನಗೆ ರಥೋತ್ಸವ, ತಾಯೆ ರಥೋತ್ಸವ.

ಭೃಂಗಗಳ ಸವಿ ಝೇಂಕಾರದಲಿ, ತುಂಗಾ ನದಿಯ ಪಾವನದೊಡಲಲಿ  
ಮತ್ಸ್ಯಗಳು ಕುಣಿದು ನರ್ತಿಸುವಲಿ, ಸತ್ವಭರಿತ ವೇದಘೋಷಗಳ ಲೇಪನ.   

                            

ನಾಗಸ್ವರಗಳ ನೀನಾದದಲಿ, ಶೃಂಗಗುರುವರ್ಯರ ನೇತೃತ್ವದಲಿ  

ನಿನಗೆ ತೆಪ್ಪೋತ್ಸವ, ತಾಯೆ ತೆಪ್ಪೋತ್ಸವ, ನಿತ್ಯೋತ್ಸವ.

 

ಮಹಿಷಾಸುರನ ಮರ್ಧಿಸಿದ ದೇವರರಿಮೆಯ, ಸಂವತ್ಸರ, ಮನ್ವಂತರ ನೆನೆಸುವ  
ವಿಜಯೋತ್ಸವ ತಾಯೆ, ನಿನಗೆ ವಿಜಯೋತ್ಸವ, ದೇವಿ ವಿಜಯೋತ್ಸವ.

ದೀಪೋತ್ಸವ ತಾಯೆ, ದೀಪೋತ್ಸವ, ವಿಜಯೋತ್ಸವ ತಾಯೆ, ವಿಜಯೋತ್ಸವ.

 

ಊದುತ ದೇವಿಯ ರಣ ಕಹಳೆಯ, ಬಾರಿಸು ಮಾತೆಯ ಡಿಂ ಡಿಮವ,

ಹಾಡುತ ದೇವಿಯ ವಿಜಯ ಗಾಥೆಯ, ಬಾರಿಸು ಮಾತೆಯ ಡಿಂ ಡಿಮವ.

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಬೆಂಗಳೂರು .

ದೂ: 9448488910


 ಹನಿಕವನಗಳು

Thanks to Petal Republic 

ಲೀಲೆ

 

ಗಾಳಿಗೂ ಶಕ್ತಿ ಇದೆಯಂತೆ  

ಜೇನಿನ ದಾಳಿಯ ತರವಂತೆ

ಘಮವನು ಹೂವು ತೋರಿಸದು

ಮೂಗಿಗೆ ಸುಮವು ಸೂಸುವುದು




ಮಳೆ ನೀರು

ಮೆಟ್ಟಲ ಮೇಲೆ ಬೀಳುತ್ತಿತ್ತು  

ಮುತ್ತಿನ ಮಣಿಗಳ ತರವಿತ್ತು

ಬಿದ್ದರು ತಾನೇ ನಲಿದಿತ್ತು

ಮುತ್ತಿನ ರೂಪ ತಾಳಿತ್ತು 


ರಚನೆ: ಡಾ. ಬೆಳವಾಡಿ ಪ್ರಭಾಕರ್


pixel ನಲ್ಲಿ deb dutta ಇವರಿಗೆ ಧನ್ಯವಾದಗಳು 

 

ಚಿಟ್ಟೆ ಚಿಟ್ಟೆ

 

ಬೆರಳಿನ ಮುಂದೆ ಗೋಲಿಯು ಇತ್ತು

ನನ್ನಯ ಗಮನ ಗುರಿಯ ಮೇಲಿತ್ತು

ಎದುರಿಗೆ ಇದ್ದವು ಹಲವಾರು ಗೋಲಿ

ನನಗೆ ಬೇಕಿತ್ತು ಆ ಬಣ್ಣದ ಗೋಲಿ

 

ಬೆರಳನು ಬಾಗಿಸಿ ರೊಯ್ಯನೆ ಬಿಟ್ಟೆ

ಹಾರುತ ಬಂದಿತು ಬಣ್ಣದ ಚಿಟ್ಟೆ

ಗೋಲಿಯ ರಭಸಕೆ ತಗುಲಿತು ರೆಕ್ಕೆ

ಅಳುತಲಿ ನಿಂದೆ ದುಃಖವು ಉಕ್ಕೆ

 

ತಿಳಿಯದೆ ಆಯಿತೆ ಚಿಟ್ಟೆಗೆ ಪೆಟ್ಟು  

ಕ್ಷಣದಲಿ ಕಂಡೆನು ಚಿಟ್ಟೆಯ ಗುಟ್ಟು

ಬಿದ್ದಿಹ ಚಿಟ್ಟೆ ನೋಡದೋ ಪಕ್ಕ

ನೋಡಲು ಹೋದರೆ ಹಾರಿತೆ ಠಕ್ಕ!

 

ರಚನೆ: ಡಾ. ಬೆಳವಾಡಿ ಪ್ರಭಾಕರ್

ಗುರುವಾರ, ಮಾರ್ಚ್ 23, 2023

ಆಧನಿಕ ರೈತ

ಆಧನಿಕ ರೈತ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಅನ್ನವ ನೀಡುವ ಅನ್ನದಾತ
ಕನ್ನವ ಹಾಕುವ ಕನ್ನದಾತ

ಉಳುವಾ ರೈತನ ನೋಡಲ್ಲಿ
ರೈತನ ನೇಗಿಲು ನೇತಲ್ಲಿ
ಟ್ರ್ಯಾಕ್ಟರ್ ಹರಿಸಿದ ಹೊಲದಲ್ಲಿ
ಆಧುನಿಕತೆಯ ದಿನದಲ್ಲಿ

ಎತ್ತು, ಏತ ನೆನಪಿನಲಿ
ನೀರು ಹರಿಯಲು ಪಂಪಿನಲಿ
ಬೀಜವ ಬಿತ್ತುವ ಕೈಯೆಲ್ಲಿ
ಬೆವರನು ಸುರಿಸುವ ಮೈಯೆಲ್ಲಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಗೊಬ್ಬರ ಹರಡಿತು ಯಂತ್ರವದು
ಅಗೋ ಔಷದಿ ಚಿಮ್ಮಿತು ತಂತ್ರವದು
ಹನಿ ನೀರಾವರಿ ಇಂದಿನ ನೀತಿ
ನೀರನು ಉಳಿಸುವ ನೂತನ ರೀತಿ

ಕಟಾವು ಮಾಡಲು ಜನ ಬೇಕಿಲ್ಲ
ಫಸಲು ಬರದಿರೆ ವಿಮೆ ಇದೆಯಲ್ಲ
ಪತ್ನಿಯು ತರುವಳು ಅನ್ನದ ಬುತ್ತಿ
ಬುಟ್ಟಿಯ ಹೊತ್ತಿ ಸಿಂಬಿಯ ಸುತ್ತಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಭೂಮಿಯಿಲ್ಲದ ರೈತರು ಉಂಟು
ಇವರಿಗೂ ಬೇಕು ಪುಕ್ಕಟೆ ಕರೆಂಟು
ಸಾಲ ಕಟ್ಟದೇ ಬ್ಯಾಂಕಿಗೆ ಖೋತ
ಸಾಲ ಮನ್ನಾ ಇವರ ನಿತ್ಯದ ಗಾಥ

ಅನ್ನವಿಲ್ಲದೆ ಸತ್ತ ಅನ್ನದಾತ
ಚಿನ್ನವನೇ ಬಿತ್ತ ಕನ್ನದಾತ
ಕಾಯವ ತೊರೆದ ಕಾಯಕಯೋಗಿ
ಮಣ್ಣನೆ ಕದಿಯೇ ನಾಯಕಭೋಗಿ

ಮಣ್ಣಿನ ಮಕ್ಕಳು ಇವರಂತೆ
ನುಣ್ಣನೆ ಬೋಳಿಸೋ ಕುಳವಂತೆ
ಬಿದ್ದರೂ ಮೀಸೆ ಮಣ್ಣಾಗದಂತೆ
ನುಣುಚಿಕೊಳ್ಳುವ ಗುಣವಂತೆ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ರೈತಗೆ ತೋರಿಸಿ ಧರಣಿಯ ಹಾದಿ
ಕೆಲವರು ಪಡೆದರು ಸೌಧದ ಗಾದಿ.

ರಚನೆ : ಡಾ. ಪ್ರಭಾಕರ ಬೆಲವಾಡಿ



ಬುಧವಾರ, ಮಾರ್ಚ್ 22, 2023

ಯುಗಾದಿ

ಯುಗಾದಿ ಬಂತು

ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ

ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ತೋರಣ ಕಟ್ಟೋಣ ತಾರವ್ವ ಬೇವು
ಚಿತ್ರಾನ್ನ ತಿನ್ನೋಣ ತುರಿಯೇ ಮಾವು

ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು

ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.

ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.

ರಚನೆ : ಡಾ. ಪ್ರಭಾಕರ ಬೆಲವಾಡಿ 

ಉಕ್ಕಿನ ಗೂಡಿನ ಮೌನ ಯೋಗಿ

  ಉಕ್ಕಿನ ಗೂಡಿನ ಮೌನ ಯೋಗಿ ನಗರವು ಮಲಗಿದೆ ಸುಖದ ಉಡಿಯಲಿ , ಹಳಿಗಳ ಮೇಲೆ ನಕ್ಷತ್ರದ ಹೊಳಪು , ಸಾವಿರ ಜೀವಗಳು ಕನಸಿನ ಕಡಲಲಿ , ಹೊದ್ದಿವೆ ಮೌನದ ಬೆಚ್ಚನೆಯ ಹೊದ...